ಬೆಂಗಳೂರು: ಸಾಲ ಮಾಡಿ ಸುಸ್ತು ಆದವರಿಗೆ ಇಲ್ಲಿದೆ ಪರಿಹಾರ, ಏನಪ್ಪಾ ಸಾಲಕ್ಕೆ ಪರಿಹಾರ ಅಂತೀರಾ ಒಮ್ಮೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಾಲದ ಕಂತು ಪಾವತಿಸಲು ಕಷ್ಟಪಡುವ ಗ್ರಾಹಕರಿಗೆ ನೆರವಾಗಲು ಆರ್ಬಿಐ ಹೊಸ ಮಾರ್ಗಸೂಚಿ ಸಿದ್ಧಪಡಿಸಿದೆ. ಈ ನಿಯಮವು ಜುಲೈ 1, 2026 ರಿಂದ ಜಾರಿಗೆ ಬರಲಿದೆ.

ರಾಜ್ಯ ವಿಪತ್ತು ಪರಿಹಾರ ನಿಧಿ (SDRF), ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ಘೋಷಿತವಾದ ನೈಸರ್ಗಿಕ ವಿಕೋಪಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ಯಾವ ರೀತಿ ಎನ್ನುತ್ತಿರಾ? ಇಲ್ಲಿದೆ ನೋಡಿ ಮಾಹಿತಿ

ಮೊದ ಮೊದಲು ಪ್ರವಾಹ, ಭೂಕಂಪ ಅಥವಾ ಚಂಡಮಾರುತದಂತಹ ವಿಪತ್ತುಗಳು ಸಂಭವಿಸಿದಾಗ, ಸಾಲಗಾರರು ತಮಗೆ ಇಎಂಐ ಪಾವತಿಸಲು ವಿನಾಯಿತಿ ಬೇಕೆಂದು ಬ್ಯಾಂಕ್ಗಳಿಗೆ ಅಲೆದು ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಹೊಸ ನಿಯಮದಂತೆ, ನಿಮ್ಮ ಪ್ರದೇಶದಲ್ಲಿ ಸರ್ಕಾರವು ಅಧಿಕೃತವಾಗಿ ‘ಪ್ರಾಕೃತಿಕ ವಿಕೋಪ’ ಎಂದು ಘೋಷಿಸಿದರೆ, ಬ್ಯಾಂಕ್ಗಳೇ ಸ್ವಯಂಪ್ರೇರಿತವಾಗಿ ನಿಮಗೆ ಸಾಲ ಮರುಪಾವತಿಯಲ್ಲಿ ರಿಯಾಯಿತಿ ನೀಡಲಿವೆ.

ವಿಪತ್ತು ಘೋಷಣೆಯಾದ 45 ದಿನಗಳ ಒಳಗೆ ಬ್ಯಾಂಕ್ಗಳು ಸಾಲಗಾರರಿಗೆ ಈ ಸೌಲಭ್ಯ ನೀಡುವ ನಿಮಯ ಆರಂಭಿಸಬೇಕು. ಈ ಸೌಲಭ್ಯವು ಕೇವಲ ‘ಆಕ್ಟಿವ್’ ಅಥವಾ ‘ಸ್ಟ್ಯಾಂಡರ್ಡ್’ ಖಾತೆದಾರರಿಗೆ ಮಾತ್ರ ಲಭ್ಯ. ಅಂದರೆ, ನಿಮ್ಮ ಕಂತುಗಳು 30 ದಿನಗಳಿಗಿಂತ ಹೆಚ್ಚು ಬಾಕಿ ಇರಬಾರದು. ಹಳೆಯ ಡಿಫಾಲ್ಟರ್ಗಳಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.

ಈ ನಿಯಮದ ಅವಧಿ ಜುಲೈ 1, 2026 ರ ನಂತರ ಪಡೆಯುವ ಹೊಸ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ. ಹಳೆಯ ಸಾಲಗಳ ವಿಷಯದಲ್ಲಿ ಈಗಿರುವ ನಿಯಮಗಳೇ ಮುಂದುವರಿಯಲಿವೆ ಎಂದು ಆರ್‌ ಬಿ ಐ ಮಾಹಿತಿ ನೀಡಿದೆ.