ನವದೆಹಲಿ: ತಮಿಳುನಾಡು ರಾಜಕಾರಣದ ಅಭಿವೃದ್ಧಿಯಿಂದಾಗಿ ದಶಕಗಳ ಕಾಲದ ಕಾಂಗ್ರೆಸ್‌-ಡಿಎಂಕೆ ಮೈತ್ರಿಯಲ್ಲಿ ಇದೀಗ ಬಿರುಕು ಮೂಡಿದೆ. ಎಲ್ಲರ ಗಮನ ತಮಿಳುನಾಡಿನತ್ತ ಇರುವಾಗ ಒಂದಲ್ಲ ಒಂದು ರೀತಿ ವಾದ ವಿವಾದ ಸೃಷ್ಟಿಯಾಗುತ್ತಿದೆ.

ತಮಿಳುನಾಡಿನಲ್ಲಿ ನಟ ವಿಜಯ್‌ ಗೆಲವಿನ ಈ ಪರಿಣಾಮ ಈಗ ಸಂಸತ್ತಿನವರೆಗೂ ತಲುಪಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳಲು ಡಿಎಂಕೆ ಹಿಂದೇಟು ಹಾಕಿದೆ.

ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಕಾಂಗ್ರೆಸ್‌ ಬೆಂಬಲ ನೀಡುತ್ತಿರುವುದು ಡಿಎಂಕೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಿತ್ರ ಪಕ್ಷವಾಗಿದ್ದುಕೊಂಡೇ ಎದುರಾಳಿ ಬಣಕ್ಕೆ ಬೆಂಬಲ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ, ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಪಕ್ಷದ ಹಿರಿಯ ನಾಯಕಿ ಕನಿಮೊಳಿ) ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಕನಿಮೊಳಿ ಅವರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಮ್ಮ ವಿರೋಧಿ ಬಣವನ್ನು ಬೆಂಬಲಿಸುತ್ತಿರುವುದರಿಂದ, ಲೋಕಸಭೆಯಲ್ಲಿ ಆ ಪಕ್ಷದ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳುವುದು ಇನ್ನು ಮುಂದೆ ನಮಗೆ ಸೂಕ್ತವಲ್ಲ. ಎಂಕೆ ಸಂಸದರಿಗೆ ಪ್ರತ್ಯೇಕ ಆಸನ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿರುವ ಪತ್ರ ಇದೀಗ ಬೆಳಕಿಗೆ ಬಂದಿದೆ.