Share This News

ರಾಜಕೀಯ ಅಂದ್ರೆ ಕೇವಲ ಅಧಿಕಾರ ಅಲ್ಲ, ಅದೊಂದು ಹಠ, ಅದೊಂದು ತಂತ್ರ, ಅದೊಂದು ಸದಾ ಜಾಗೃತವಾಗಿರಬೇಕಾದ ಚದುರಂಗದಾಟ! ಈ ಚದುರಂಗದಾಟದಲ್ಲಿ ಎದುರಾಳಿಗಳು ಎಷ್ಟೇ ಬಲಿಷ್ಠವಾಗಿದ್ದರೂ, ತನ್ನದೇ ಆದ ದಾಳ ಉರುಳಿಸಿ ಪಂದ್ಯದ ದಿಕ್ಕನ್ನೇ ಬದಲಿಸುವ ಒಬ್ಬ ನಾಯಕನಿದ್ದಾನೆ. ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ನೆನಪಾಗುವ ಏಕೈಕ ಹೆಸರು… ಕರ್ನಾಟಕ ಕಾಂಗ್ರೆಸ್‌ನ ಭದ್ರಕೋಟೆ, ಕನಕಪುರದ ಬಂಡೆ, ದಿ ಗಿಫ್ಟ್ ಆಫ್ ಗಾಡ್ ಅಂತಲೇ ಕರೆಯಿಸಿಕೊಳ್ಳುವ ಡೆಮಾಕ್ರೆಟಿಕ್ ವಾರಿಯರ್… ಬೇರೆ ಯಾರೂ ಅಲ್ಲ, ಅವರೇ ಕರಾವಳಿಯಿಂದ ಕಲ್ಯಾಣ ಕರ್ನಾಟಕದವರೆಗೆ ಸದ್ದು ಮಾಡ್ತಿರೋ ಡೈನಮಿಕ್ ಲೀಡರ್ ಡಿ.ಕೆ. ಶಿವಕುಮಾರ್!

ರಾಜಕೀಯದಲ್ಲಿ ಎರಡು ರೀತಿಯ ನಾಯಕರಿದ್ದಾರೆ. ಒಬ್ಬರು ಅಧಿಕಾರದ ಕುರ್ಚಿಯನ್ನು ಹುಡುಕಿಕೊಂಡು ಹೋಗುವವರು, ಮತ್ತೊಬ್ಬರು ಕುರ್ಚಿಯೇ ತಮ್ಮನ್ನು ಹುಡುಕಿಕೊಂಡು ಬರುವಂತೆ ಇಡೀ ವ್ಯವಸ್ಥೆಯನ್ನು ಸೃಷ್ಟಿಸುವವರು. ಎರಡನೇ ಸಾಲಿಗೆ ನಿಖರವಾಗಿ ಹೊಂದುವ ಹೆಸರು — ಡಿ.ಕೆ. ಶಿವಕುಮಾರ್. ಅವರ ನಡೆದು ಬಂದ ದಾರಿ ಯಾವುದೇ ಹೈ-ವೋಲ್ಟೇಜ್ ಸಿನೆಮಾ ಕಥೆಗಿಂತ ಕಮ್ಮಿಯಿಲ್ಲ. ಕನಕಪುರದ ಹಳ್ಳಿಯೊಂದರಿಂದ ಆರಂಭವಾದ ಇವರ ಪಯಣ ಇಂದು ವಿಧಾನಸೌಧದ ಮುಖ್ಯಮಂತ್ರಿ ಗಾದಿಯವರೆಗೆ ಬಂದು ತಲುಪಿದೆ. ಹಾಗೆ ನೋಡಿದರೆ ಡಿ.ಕೆ. ಶಿವಕುಮಾರ್ ಅಂದ್ರೆ ಕೇವಲ ಇವತ್ತಿನ ಉಪಮುಖ್ಯಮಂತ್ರಿ ಮಾತ್ರವಲ್ಲ. ವಿದ್ಯಾರ್ಥಿ ದೆಸೆಯಲ್ಲೇ NSUI ಮೂಲಕ ರಾಜಕೀಯದ ಅಖಾಡಕ್ಕಿಳಿದವರು. ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಇವರು ಯುವಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು.

ಕೇವಲ ೨೩ನೇ ವಯಸ್ಸಿನಲ್ಲಿ 1985 ರಲ್ಲಿ ಅಂದಿನ ರಾಜಕೀಯ ದ್ರುವತಾರೆ ಎಚ್.ಡಿ. ದೇವೇಗೌಡರ ವಿರುದ್ಧ ಸಾತನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ, ಸೋತರೂ ಭಾರಿ ಪೈಪೋಟಿ ನೀಡಿ ಎಲ್ಲರ ಗಮನ ಸೆಳೆದರು. ಒಮ್ಮೆ ಚುನಾವಣಾ ರಾಜಕೀಯದಲ್ಲಿ ಗೆಲುವಿನ ಖಾತೆ ತೆರೆದ ‘ಬಂಡೆ’ ಆಮೇಲೆ ಹಿಂದೆ ತಿರುಗಿ ನೋಡಲೇ ಇಲ್ಲ. ೧೯೮೯ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಇಂದಿನವರೆಗೆ ಅವರು ಎದುರಿಸಿದ ಯಾವುದೇ ವಿಧಾನಸಭಾ ಚುನಾವಣೆಯಲ್ಲೂ ಸೋತಿಲ್ಲ. ಕ್ಷೇತ್ರ ಮರುವಿಂಗಡಣೆಯ ನಂತರ ಕನಕಪುರ ಇವರ ಭದ್ರಕೋಟೆಯಾಯಿತು. ವಿರೋಧಿಗಳು ಎಷ್ಟೇ ತಂತ್ರ ಹೂಡಿದರೂ ಶಿವಕುಮಾರ್ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನವನ್ನು ಗಮನಿಸಿದರೆ ಅದೊಂದು ಹಠದ ಇತಿಹಾಸ. ಗುಜರಾತ್, ಮಹಾರಾಷ್ಟ್ರ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ಅಥವಾ ಶಾಸಕರು ಸಂಕಷ್ಟದಲ್ಲಿದ್ದಾಗ ರೆಸಾರ್ಟ್ ರಾಜಕೀಯದ ಉಸ್ತುವಾರಿ ವಹಿಸಿಕೊಂಡು ಹೈಕಮಾಂಡ್‌ನ ಪರಮ ಆಪ್ತರಾದರು.ಇನ್ನು ಡಿಕೆ ಶಿವಕುಮಾರ್ ಕೇವಲ ಅದೃಷ್ಟದಿಂದ ಮೇಲೆ ಬಂದವರಲ್ಲ; ಬದಲಿಗೆ ಎದುರಾದ ಪ್ರತಿಯೊಂದು ಸವಾಲನ್ನು ಮೆಟ್ಟಿ ನಿಂತವರು. ಜೈಲು ವಾಸ, ಇಡಿ-ಐಟಿ ದಾಳಿಗಳಂತಹ ಬಿರುಗಾಳಿಗಳು ಎದುರಾದಾಗಲೂ ಧೃತಿಗೆಡದೆ, ‘ನನ್ನ ಹಿಂದೆ ನನ್ನ ಜನ ಇದ್ದಾರೆ’ ಎಂದು ಎದೆಯುಬ್ಬಿಸಿ ನಿಂತವರು ಈ ಡಿಕೆಶಿ. ​ಪಕ್ಷ ಅಧಿಕಾರಕ್ಕೆ ಬರದಿದ್ದರೆ ನಾನು ಗಡ್ಡ ತೆಗೆಯುವುದಿಲ್ಲ ಎಂದು ಶಪಥ ಮಾಡಿ, ಇಡೀ ರಾಜ್ಯಾದ್ಯಂತ ಸುತ್ತಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಾಗ, ಅವರ ಕಣ್ಣಲ್ಲಿ ಮುಖ್ಯಮಂತ್ರಿ ಕುರ್ಚಿಯ ಮೇಲಿನ ಹಕ್ಕು ಎದ್ದುಕಾಣುತ್ತಿತ್ತು. ಅವರು ಇಷ್ಟು ದಿನ’ಉಪ’ಮುಖ್ಯಮಂತ್ರಿಯಾಗಿದ್ರೂ ಕೂಡ ಅವರ ಬಾಡಿ ಲಾಂಗ್ವೇಜ್ ಮಾತ್ರ ಸದಾ ಒಬ್ಬ ‘ಮುಖ್ಯ’ ನಾಯಕನನ್ನೇ ಬಿಂಬಿಸುತ್ತಿತ್ತು.. ಬಿಂಬಿಸುತ್ತೆ..

೨೦೨೦ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಇವರ ರಾಜಕೀಯ ಜೀವನದ ಅತಿ ದೊಡ್ಡ ತಿರುವು. ಪಕ್ಷ ಸತತ ಸೋಲುಗಳಿಂದ ಕಂಗೆಟ್ಟಿದ್ದಾಗ ಬೂತ್ ಮಟ್ಟದಿಂದ ಪಕ್ಷವನ್ನು ಮರುಸಂಘಟಿಸಿದರು. ಮೇಕೆದಾಟು ಪಾದಯಾತ್ರೆ ಮತ್ತು ಭಾರತ್ ಜೋಡೋ ಯಾತ್ರೆಯನ್ನು ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಿದರು.ತಮ್ಮ ಅದ್ಭುತ ಕಾರ್ಯತಂತ್ರ ಹಾಗೂ ಸಿದ್ದರಾಮಯ್ಯನವರ ಜೊತೆಗೂಡಿ ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೩೫ ಸೀಟುಗಳ ಭರ್ಜರಿ ಬಹುಮತ ತಂದುಕೊಟ್ಟು ಕಿಂಗ್ ಮೇಕರ್ ಆದವರು ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ರಾಜ್ಯ ಮುನ್ನಡೆಸಿದ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ನಡೆ ಸದಾ ಕುತೂಹಲಕಾರಿ. ಸಿದ್ದರಾಮಯ್ಯನವರ ಜೊತೆಗಿನ ಸ್ನೇಹ-ಸ್ಪರ್ಧೆಯ ಜುಗಲ್‌ಬಂದಿ, ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಪಟ್ಟ ಶ್ರಮ ಎಲ್ಲವೂ ಕಣ್ಣಮುಂದಿದೆ.

ಕರ್ನಾಟಕ ರಾಜಕೀಯ ಅಖಾಡ ಅಂದ್ರೆ ಹಾಗೇನೆ, ಇಲ್ಲಿ ದಿನಕ್ಕೊಂದು ಕಥೆ, ಕ್ಷಣಕ್ಕೊಂದು ಊಹೆ. ಈಗ ಸದ್ಯಕ್ಕೆ ರಾಜಕೀಯ ಗಲ್ಲಿಗಳಲ್ಲಿ ಹರಿದಾಡುತ್ತಿರುವ ಬಿಸಿಬಿಸಿ ಸುದ್ದಿ ಏನೆಂದರೆ ಜೂನ್ 3 ಕ್ಕೆ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಿರೋದು. ಡಿಕೆಶಿ ಸಿಎಂ ಆದ್ರೆ ಏನೆಲ್ಲಾ ಬದಲಾವಣೆ ಆಗಬಹುದು ಅನ್ನೋದು ಸಖತ್ ಟ್ವಿಸ್ಟ್ ಕೂಡ ಕಾದಿದೆ. ಆಗಬಹುದಾದ ಬದಲಾವಣೆ ಅಂದ್ರೆ ಫೈಲ್‌ಗಳು ರಾಕೆಟ್ ವೇಗದಲ್ಲಿ ವಿಲೇವಾರಿಯಾಗಬಹುದು. ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಖಡಕ್ ಸಿಎಂ ನಮಗೆ ಸಿಗಲಿದ್ದಾರೆ. ‘ಬ್ರಾಂಡ್ ಬೆಂಗಳೂರು’ ಕನಸು ಹೊತ್ತಿರುವ ಡಿಕೆಶಿ ಸಿಎಂ ಆದ ತಕ್ಷಣ ಇಡೀ ಸಿಟಿಯ ಟ್ರಾಫಿಕ್‌ಗೆ ಹೈಟೆಕ್ ಟಚ್ ಸಿಕ್ಕರೂ ಸಿಗಬಹುದು.ಇನ್ನು ಸಿದ್ದರಾಮಯ್ಯ ರಾಜೀನಾಮೆ ಕೊಡ್ತಿದ್ದಂತೆ ಡಿ.ಕೆ ಶಿವಕುಮಾ‌ರ್ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೆಯುತ್ತಿದೆ. ಡಿಕೆಶಿ ನೆಚ್ಚಿನ ಆರಾಧ್ಯ ದೈವ, ಗುರುವಿನ ಅಣತಿಯಂತೆಯೇ ಪ್ರಮಾಣ ವಚನ ನಡೆಯಲಿದೆ. ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ತೆರಳಿ, ಅಜ್ಜಯ್ಯನ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಅಜ್ಜಯ್ಯ ಸೂಚಿಸಿದ ಜೂನ್ 3ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗ್ತಿದೆ. ಅಧಿಕ ಮಾಸದೊಳಗೇ ಪ್ರಮಾಣ ವಚನಕ್ಕೆ ತಯಾರಿ ನಡೆದಿದೆ.


Share This News