ಹಣವಿದ್ದವರಿಗೆ ತಕ್ಷಣ ದರ್ಶನ, ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಸಾಮಾನ್ಯ ಭಕ್ತರಿಗೆ ಕೇವಲ ಸೆಕೆಂಡುಗಳ ದರ್ಶನ! ದೇವರ ದರ್ಶನದಲ್ಲೂ ತಾರತಮ್ಯವೇ? ಹಣವಿದ್ದವರಿಗೆ ಹೂವಿನ ಹಾರ, ಸಾಮಾನ್ಯ ಭಕ್ತರಿಗೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಶಿಕ್ಷೆಯೇ? ಕೊನೆಗೂ ಈ ವಿಐಪಿ ದರ್ಶನ ಸಂಸ್ಕೃತಿಗೆ ಈಗ ಹೈಕೋರ್ಟ್ ಬ್ರೇಕ್ ಹಾಕಿದೆ! ಕೋರ್ಟ್ ಅಂಗಳದಲ್ಲಿ ವಿಐಪಿ ಕಲ್ಚರ್ ವಿರುದ್ಧ ಕೆಂಡಾಮಂಡಲವಾದ ನ್ಯಾಯಾಧೀಶರು, ‘ದೇವರಷ್ಟೇ ವಿಐಪಿ, ಯಾವ ನರ ಮನುಷ್ಯನೂ ಅಲ್ಲ’ ಅಂತ ಖಡಕ್ ಆಗಿ ಹೇಳಿದ್ದಾರೆ. ಅಷ್ಟಕ್ಕೂ ಹೈಕೋರ್ಟ್ ಗರಂ ಆಗಿದ್ದಾದರೂ ಯಾಕೆ.. ದೇವಸ್ಥಾನಗಳಲ್ಲಿ ಸಾಮಾನ್ಯ ಭಕ್ತರ ಗೋಳು ತೀರೋದು ಯಾವಾಗ? ಇದ್ರ ಸಂಪೂರ್ಣ ಮಾಹಿತಿ ನೋಡ್ತಾ ಹೋಗೋಣ. ದೇವರೆಂದರೆ ಎಲ್ಲರನ್ನೂ ಸಮನಾಗಿ ಕಾಣುವ ಕರುಣಾಮಯಿ. ಆದರೆ, ಇತ್ತೀಚಿನ ದಿನಗಳಲ್ಲಿ ದೇವರ ಮನೆಗಳೂ ಕೂಡ ಕಾರ್ಪೊರೇಟ್ ಶೈಲಿಯ ವಿಐಪಿ ಸಂಸ್ಕೃತಿಗೆ ಬಲಿಯಾಗುತ್ತಿವೆ. ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಗರ್ಭಗುಡಿ ಮುಂದೆ ಹಾರತಿ ತಟ್ಟೆ ಗೆ ದೊಡ್ಡ ದೊಡ್ಡ ನೋಟುಗಳನ್ನ ಸಮರ್ಪಸಿ ಗಂಟೆಗಟ್ಟಲೆ ಗರ್ಭಗುಡಿ ಮುಂದೆ ನಿಂತುಕೊಂತಾರೆ. ಆದ್ರೆ ಕ್ಯೂ ನಿಂತು ಸುಸ್ತಾಗುವ ಸಾಮಾನ್ಯ ಭಕ್ತನಿಗೆ ಸಿಗೋದು ಕೇವಲ ಎರಡು ಸೆಕೆಂಡಿನ ದರ್ಶನ. ಆದರೆ, ದುಡ್ಡು, ಅಧಿಕಾರ ಇದ್ದವರಿಗೆ ಮಾತ್ರ ರೆಡ್ ಕಾರ್ಪೆಟ್ ಸ್ವಾಗತ! ಈ ಅನ್ಯಾಯದ ವಿರುದ್ಧ ಈಗ ನ್ಯಾಯಾಲಯವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದೇವಸ್ಥಾನಗಳಲ್ಲಿ ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ತಾರತಮ್ಯದ ವಿರುದ್ಧ ಮದ್ರಾಸ್ ಹೈಕೋರ್ಟ್ ಈಗ ಭಕ್ತರ ಪರವಾಗಿ ಧ್ವನಿ ಎತ್ತಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಪಿ. ಚೊಕ್ಕಲಿಂಗಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣನ್ ಅವರ ರಜಾಕಾಲದ ಪೀಠ, ತಮಿಳುನಾಡಿನ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿನ ‘ವಿಐಪಿ ಸಂಸ್ಕೃತಿ’ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟಕ್ಕೂ ಈ ವಿಚಾರ ಕೋರ್ಟ್ ವರೆಗೂ ಹೋಗಿದ್ಯಾಕೆ. ಇತ್ತೀಚೆಗೆ ತಮಿಳುನಾಡಿನ ತಿರುಪ್ಪರಂಕುಂದರಂ ದೇವಸ್ಥಾನದಲ್ಲಿ ಹೊಸ ಸಚಿವರೊಬ್ಬರು ಮತ್ತು ಅವರ ಬೆಂಬಲಿಗರ ದರ್ಶನಕ್ಕಾಗಿ ದೇವಸ್ಥಾನದ ನಿಗದಿತ ಸಮಯ ಮುಗಿದಿದ್ದರೂ ನಿಯಮ ಮೀರಿ ಬಾಗಿಲು ತೆರೆದಿಡಲಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ಬಂಕೆ ಬಿಹಾರಿ ದೇವಸ್ಥಾನದ ಪ್ರಕರಣದಲ್ಲಿ ಇಂತಹ ವಿಶೇಷ ಕ್ಯೂ ವ್ಯವಸ್ಥೆಯನ್ನು ರದ್ದುಗೊಳಿಸಲು ಸಮಿತಿ ರಚಿಸುವಂತೆ ಸೂಚಿಸಿರುವುದನ್ನು ಮದ್ರಾಸ್ ಹೈಕೋರ್ಟ್ ಈ ವೇಳೆ ನೆನಪಿಸಿದೆ.
ನ್ಯಾಯಾಲಯವು ವಿಚಾರಣೆ ವೇಳೆ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಚಾವಟಿ ಬೀಸಿದ್ದು ಹೀಗೆ:ಮಂತ್ರಿಗಳು ಮತ್ತು ಶಾಸಕರು ತಾವು ಕಾನೂನಿಗಿಂತ ಮಿಗಿಲಾದವರು ಎಂದು ಭಾವಿಸಬಾರದು. ತಾವು ಯಾವಾಗ ಬೇಕಾದರೂ ದೇವಸ್ಥಾನಕ್ಕೆ ನುಗ್ಗಬಹುದು ಮತ್ತು ತಮಗಾಗಿ ದೇವರು ಕಾಯುತ್ತಿರುತ್ತಾನೆ ಎಂಬ ಭ್ರಮೆಯಿಂದ ಹೊರಬರಬೇಕು. ದೇವರ ಮುಂದೆ ಎಲ್ಲರೂ ಸಮಾನರು.”ದೇವಸ್ಥಾನಗಳಿಗೆ ಆದಾಯ ನಷ್ಟವಾಗುತ್ತದೆ ಎಂಬ ಕಾರಣ ನೀಡಿ ವಿಐಪಿ ದರ್ಶನವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಚರ್ಚ್ಗಳಲ್ಲಾಗಲಿ, ಮಸೀದಿಗಳಲ್ಲಾಗಲಿ ಇಂತಹ ವಿಶೇಷ ಪಾವತಿ ದರ್ಶನ ವ್ಯವಸ್ಥೆ ಇದೆಯೇ? ಹಾಗಿದ್ದಾಗ ಹಿಂದೂ ದೇವಾಲಯಗಳಲ್ಲಿ ಮಾತ್ರ ಹಣದ ಆಧಾರದ ಮೇಲೆ ಭಕ್ತರನ್ನು ಏಕೆ ವಿಂಗಡಿಸಬೇಕು?” ಒಟ್ಟಿನಲ್ಲಿ, ಭಕ್ತಿಯ ಜಾಗದಲ್ಲಿ ಹಣ ಮತ್ತು ಅಧಿಕಾರವೇ ವಿಐಪಿ ಆಗುತ್ತಿರುವ ಇಂದಿನ ದಿನಗಳಲ್ಲಿ ಮದ್ರಾಸ್ ಹೈಕೋರ್ಟ್ನ ಈ ಆದೇಶ ಸಾಮಾನ್ಯ ಭಕ್ತರ ಮುಖದಲ್ಲಿ ನಗು ತಂದಿದೆ. ದೇವಸ್ಥಾನಗಳು ಕೇವಲ ಶ್ರೀಮಂತರ ಮತ್ತು ರಾಜಕಾರಣಿಗಳ ಸ್ವತ್ತಾಗದೆ, ಎಲ್ಲರಿಗೂ ಸಮಾನ ಹಕ್ಕು ನೀಡುವ ಪವಿತ್ರ ಕೇಂದ್ರಗಳಾಗಬೇಕು ಎಂಬ ಆಶಯ ಈ ತೀರ್ಪಿನಲ್ಲಿದೆ. ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು 6 ವಾರಗಳ ಕಾಲ ಮುಂದೂಡಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ.
