ಮಡಿಕೇರಿ : ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇ ಬಾತ್ರೂಮ್ನಲ್ಲಿ ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಯಾದ ವಿನೂತ (27) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೈಸೂರಿನಿಂದ ಕೊಡಗು ಪ್ರವಾಸಕ್ಕೆಂದು ಆಗಮಿಸಿದ್ದ ವಿನೂತ, ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದರು. ಜೂನ್ 7ರ ಭಾನುವಾರ ಬೆಳಗ್ಗೆ ಸ್ನಾನ ಮಾಡಲು ಬಾತ್ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘೋರ ದುರಂತ ಸಂಭವಿಸಿದೆ.ವಿನೂತ ಅವರು ಸ್ನಾನ ಮಾಡಲು ಹೋದಾಗ ಬಾತ್ರೂಮ್ನಲ್ಲಿದ್ದ ಗ್ಯಾಸ್ ಗೀಸರ್ನಿಂದ ಹಠಾತ್ ಗ್ಯಾಸ್ ಸೋರಿಕೆಯಾಗಿದೆ.
ಗ್ಯಾಸ್ ಉರಿಯುವಾಗ ಬಿಡುಗಡೆಯಾಗುವ ಬಣ್ಣರಹಿತ, ವಾಸನೆರಹಿತ ಆಪಾಯಕಾರಿ ‘ಕಾರ್ಬನ್ ಮಾನಾಕ್ಸೈಡ್’ ಅನಿಲ ಇಡೀ ಕೊಠಡಿಯನ್ನು ಆವರಿಸಿಕೊಂಡಿದೆ. ದುರಾದೃಷ್ಟವಶಾತ್, ಸದರಿ ಹೋಂಸ್ಟೇಯ ಬಾತ್ರೂಮ್ನಲ್ಲಿ ಗಾಳಿ-ಬೆಳಕು ಹೋಗಲು ಯಾವುದೇ ಕಿಟಕಿ ಅಥವಾ ವೆಂಟಿಲೇಷನ್ ವ್ಯವಸ್ಥೆ ಇರಲಿಲ್ಲ ಎಂದು ಹೇಳಲಾಗಿದೆ.
