Share This News

ನಾಲ್ವಡಿಯವರ ಬಳಿ ಮತ ಕೇಳುವ ಚಿಂತೆಯಿರಲಿಲ್ಲ. ಬದಲಾಗಿ ಪ್ರಜೆಗಳ ಹಸಿವು, ಶಿಕ್ಷಣ, ಆರೋಗ್ಯ, ನೀರಾವರಿ – ಇವೆಲ್ಲವೇ ಅವರ ಮತಪೆಟ್ಟಿಗೆ ಆಗಿತ್ತು. ಕೆ ಆರ್‌ ಎಸ್, ವಿಶ್ವವಿದ್ಯಾಲಯ, ವಿದ್ಯುತ್ ಯೋಜನೆ ಇವೆಲ್ಲ 5 ವರ್ಷದ ಯೋಜನೆಯಲ್ಲ, ಮುಂದಿನ 100 ವರ್ಷದ ದೂರದೃಷ್ಟಿ .ನಾಲ್ವಡಿಯವರ ಆಡಳಿತವನ್ನು “ಪ್ರಜಾ ಪರಮೋದ್ದೇಶದ ರಾಜರ್ಷಿ ಮಾದರಿ” ಎಂದು ಕರೆದ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ನಾಗಣ್ಣಗೌಡ.ಶ್ರೀರಂಗಪಟ್ಟಣದಲ್ಲಿ ಸಂಜೆಯ ಪ್ರಕಾಶನ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಅವರು, “ನಮ್ಮಲ್ಲಿ ಅಧಿಕಾರ ಇದೆ, ಸ್ವಾತಂತ್ರ್ಯ ಇದೆ, ಆದರೆ ನಾಲ್ವಡಿಯವರಲ್ಲಿದ್ದ ಜನರ ಮೇಲಿನ ಜವಾಬ್ದಾರಿಯ ಪ್ರಜ್ಞೆ ಇಂದಿನ ಕೆಲವು ಜನಪ್ರತಿನಿಧಿಗಳಲ್ಲಿ ಕಡಿಮೆಯಾಗಿದೆ. ಮತಕ್ಕಾಗಿ ಯೋಜನೆ ಅಲ್ಲ, ಜನರಿಗಾಗಿ ಯೋಜನೆ ಎಂಬ ನಾಲ್ವಡಿಯ ತತ್ವವನ್ನು ನಾವು ಮತ್ತೆ ನೆನಪಿಸಿಕೊಳ್ಳಬೇಕು”ಎಂದು ಅಭಿಪ್ರಾಯಪಟ್ಟರು.ಕೊನೆಯಲ್ಲಿ, “ರಾಜರ್ಷಿ ಎಂಬ ಬಿರುದು ಸುಮ್ಮನೆ ಬಂದದ್ದಲ್ಲ. ಅದು ಜನಸೇವೆಯಿಂದ ಗಳಿಸಿದ ಕಿರೀಟ. ಆ ಕಿರೀಟವನ್ನು ಇಂದಿನ ಪ್ರಜಾಪ್ರತಿನಿಧಿಗಳು ತಮ್ಮ ನಡವಳಿಕೆಯಲ್ಲಿ ಧರಿಸಿದರೆ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳುತ್ತದೆ” ಎಂದು ನಾಗಣ್ಣಗೌಡರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಂಧಿವಾದಿ ಡಾ ಬಿ ಸುಜಯ್ ಕುಮಾರ್ ಮಾತನಾಡಿ,1925ರಲ್ಲಿ ನಾಲ್ವಡಿಯವರ ಆಡಳಿತ ಸುಧಾರಣೆಗಳು ಮತ್ತು ಪ್ರಜಾ ಕಲ್ಯಾಣ ಕಾರ್ಯಗಳನ್ನು ಮೆಚ್ಚಿ, ಅವರನ್ನು“ರಾಜರ್ಷಿ” ಎಂಬ ಬಿರುದನ್ನು ಮಹಾತ್ಮ ಗಾಂಧಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನೀಡಿದ್ದರು.ಸಾಮಾನ್ಯ ರಾಜ ಅಲ್ಲ, ತಪಸ್ವಿಯಂತೆ ಜನಸೇವೆಯನ್ನೇ ಧರ್ಮವೆಂದುಕೊಂಡ ರಾಜ. ಅಂದಿನಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ “ರಾಜರ್ಷಿ” ಎಂದೇ ಜನಪ್ರಿಯರಾದರು ಎಂದರು.

ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ್, ವಕೀಲರಾದ ಎಸ್ ಆರ್ ಸಿದ್ದೇಶ್, ಬಾಲರಾಜು, ಚಿಂತಕ ಕ್ಯಾತನಹಳ್ಳಿ ಚಂದ್ರಣ್ಣ, ಪ್ರಾಧ್ಯಾಪಕ ಧನಂಜಯ, ಬ್ಯಾಡರಹಳ್ಳಿ ಪ್ರಕಾಶ್, ದರಸಗುಪ್ಪೆ ಸುರೇಶ್, ಗಂಜಾಂ ಶ್ರೀನಿವಾಸ್, ಕಡತನಾಳು ಶಿವಕುಮಾರ್, ಶೀಲಾ ನಂಜುಡಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Share This News