ಶಿವಮೊಗ್ಗ : ಪ್ರೇಯಸಿಯೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ ಹಾಗೂ ಆಕೆಯ ಪ್ರೀಯಕರನಿಗೆ ಗಲ್ಲು ಶಿಕ್ಷೆ ವಿಧಿಸಿ ಭದ್ರಾವತಿ ಕೋರ್ಟ್ ತೀರ್ಪು ನೀಡಿದೆ.
ಜನವರಿ 15, 2020 ರಂದು ಭದ್ರಾವತಿ ಪೇಪರ್ ಟೌನ್ ಪೊಲಿಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ವಾಸಿಯಾದ ಫ್ಲೋರಾ ನ್ಯಾನ್ಸಿ ಎಂಬ ಮಹಿಳೆ ರಾಜಶೇಖರಯ್ಯ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡು, ಆಕೆಯ ಗಂಡನಾದ ಪ್ರಕಾಶ್ ಬಾಬು ಇವರಿಬ್ಬರ ಸಂಬಂಧಕ್ಕೆ ಅಡ್ಡಿ ಬರುತ್ತಾನೆ ಎಂದು ಆರೋಪಿತರಿಬ್ಬರು ಸೇರಿ ಪ್ರಕಾಶ್ ಬಾಬುವಿಗೆ ಮತ್ತು ಬರುವ ಔಷದಿಯನ್ನು ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ರು. ಈ ಬಗ್ಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಈ.ಓ ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಭದ್ರಾವತಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿತರಿಗೆ ಗಲ್ಲು ಶಿಕ್ಷೆ ಹಾಗೂ 14,00,000 ದಂಡ ವಿಧಿಸಿದ್ದು, ಪಿರ್ಯಾದಿಗೆ ಪರಿಹಾರವಾಗಿ 5,00,000 ರೂ ನೀಡಲು ಆದೇಶ ಮಾಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ‌ ವಾದ ಮಂಡಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.